ಬಾದಾಮಿ ಎಂದ ಕೂಡಲೇ ನಮಗೆ ನೆನಪಾಗುವುದು ಚಾಲುಕ್ಯ ಅರಸುಮನೆತನ, ಗವಿ ದೇಗುಲಗಳು ಮತ್ತು ಅಲ್ಲಿನ ಬನಶಂಕರಿಯ ಗುಡಿ. ಒಂದು ಹೊತ್ತಲ್ಲಿ ಇಡೀ ಇಂಡಿಯಾದಲ್ಲೇ ತೀರಾ ಹೆಚ್ಚು ಬಲ ಹೊಂದಿದ ದೊರೆ ಪುಲಿಕೇಶಿಯ ಸಾಮ್ರಾಜ್ಯದ ರಾಜದಾನಿಯಾದ ಇಲ್ಲಿ ಇಂದು ಬರಿಯ ಆ ಮಿರುಗಿನ ಬೆರಗಿನ ಹಿನ್ನಡವಳಿಯ ಕೆಲವು ಕುರುಹುಗಳಶ್ಟೆ ಉಳಿದುಕೊಂಡಿವೆ. ಇರಲಿ, ಈ ಬರಹದ ಗುರಿ ಬಾದಾಮಿಯ ಹೆಸರಿನ ಬೇರನ್ನು ಗಮನಿಸುವುದಾಗಿದೆ.
ಈಗ ಸಾಮಾನ್ಯವಾಗಿರುವ ನಂಬಿಕೆಯೆಂದರೆ ಇದರ ಮೊದಲ ಹೆಸರು 'ವಾತಾಪಿ'ಯಾಗಿದ್ದು, ಹೊತ್ತು ಕಳೆದಂತೆ ಮಂದಿಯ ಬಾಯಲ್ಲಿ ಇದರ ಉಲಿಕೆ ಮಾರ್ಪಾಟು ಹೊಂದಿ 'ಬಾದಾಮಿ'ಯಾಯಿತು ಎಂದು. ಈ ನಂಬಿಕೆಗೆ ಕಾರಣವೂ ಇದೆ. ಹಲವು ಚಾಲುಕ್ಯ ಮತ್ತು ಇನ್ನಿತರೇ ಅರಸು-ಮನೆತನಗಳ ಕಲ್ಬರಹಗಳಲ್ಲಿ ಬಾದಾಮಿಯನ್ನು ವಾತಾಪಿಯೆಂದೇ ಕರೆಯಲಾಗಿದೆ. ಹಾಗಿದ್ದರೆ ವಾತಾಪಿ ಎಂಬ ಹೆಸರಿನ ಬೇರೇನೆಂದು ಕೇಳಿದರೆ ಕೆಲವರು ಈ ಊರು ರಾಮಾಯಣದಲ್ಲಿ ಬರುವ ರಕ್ಕಸ ವಾತಾಪಿಯಿಂದ ಬಂದಿತೆನ್ನುತ್ತಾರೆ. ಈ ವಿಕಿಪೀಡಿಯ ಬರಹದಲ್ಲಿ ಕೂಡ ಇದನ್ನೇ ಬರೆಯಲಾಗಿದೆ.
ಈ ಕತೆಗಳನ್ನು ಒಮ್ಮೆ ಬದಿಗಿಟ್ಟು ಈಗ ಕೆಲ ದಿಟಗಳನ್ನು ಗಮನಿಸೋಣ. ಮೊದಲೇ ಹೇಳಿದಂತೆ ಬಾದಾಮಿಯು ಬನಶಂಕರಿಯ ಗುಡಿಗೆ ಹೆಸರುವಾಸಿ. ಬನಶಂಕರಿ ಯಾವುದೇ ವೇದ-ಪುರಾಣಗಳಲ್ಲಿ ಹೇಳಲಾಗಿರುವ ದೇವತೆಯಲ್ಲ. ಅವಳು ಮಾರಮ್ಮ, ಎಲ್ಲಮ್ಮ, ಕಬ್ಬಾಳಮ್ಮ, ಕೆಂಪಮ್ಮ, ಅಣ್ಣಮ್ಮ ಇದ್ದಂತೆ ನಾಡ ಮಂದಿಯ ದೇವತೆ. ಕರ್ನಾಟಕದ ಹಲವು ಕಡೆ ಈ ದೇವಿಯ ದೇಗುಲಗಳು, ಮೂರ್ತಿಗಳು ಸಿಕ್ಕಿವೆ. ಇವಳ ಮೂಲ ಹೆಸರು 'ಬಾದುಮೆ', 'ಬಾದುಂಬೆ', 'ಬಾದಬ್ಬೆ', 'ಬಾದಮ್ಮ' ಎಂದು. ಈ ಹೆಸರುಗಳು ಹಲವು ಹಳೆಯ ಕಲ್ಬರಹಗಳಲ್ಲದೆ ಹಳೆಯ ಕನ್ನಡದ ಬರಹಗಳಲ್ಲೂ ಬರುತ್ತದೆ. ಎತ್ತುಗೆಗೆ, ಬಸವಣ್ಣರ ಒಂದು ವಚನದಲ್ಲಿ 'ಬಾದುಮೆ'ಯ ಬಗ್ಗೆ ಹೇಳಲಾಗಿದೆ. ಈ ಬಾದುಮೆಯು ನೆಲೆಸಿರುವ ಊರಿಗೆ ಬಾದಾಮಿ ಎಂಬ ಹೆಸರು ಬಂದಿರಬಹುದು. ಇದಕ್ಕೆ ಯಾವುದೇ ನೇರ ಆದಾರಾಗಳಿಲ್ಲದಿದ್ದರೂ ಬಾದುಮೆ-ಬಾದಾಮಿ ಹೆಸರುಗಳ ಹೋಲಿಕೆಯನ್ನು ಗಮನಿಸಿ ಹೆಚ್ಚು ಕಡಿಮೆ ಎಲ್ಲ ಹಿನ್ನಡವಳಿಯರಿಗರೂ ಒಪ್ಪುತ್ತಾರೆ.
ಈ ಹಳೆಯ ಬಾದಾಮಿಯೇ ಸಕ್ಕದಿಸಿದಾಗ ವಾತಾಪಿಯಾಯಿತು. ಮತ್ತು ಸಕ್ಕದವೇ ಎಲ್ಲಕ್ಕೂ ಮೇಲು, ಬೇರು ಎಂಬ ತಪ್ಪು ನಂಬಿಕೆಯಿಂದ, ಹೊತ್ತು ಕಳೆದಂತೆ, ಇದರ ಮೂಲ ಹೆಸರೇ ವಾತಾಪಿ ಎಂಬ ನಂಬಿಕೆ ನೆಲೆಯೂರಿತು. ಬಾದಾಮಿ ಸಕ್ಕದಗೊಂಡು ವಾತಾಪಿಯಾದರೆ ಬಾದುಮೆಯು ಸಕ್ಕದಗೊಂಡು ಬನಶಂಕರಿಯಾದಳು.
ಸಕ್ಕತು
ಪ್ರತ್ಯುತ್ತರಅಳಿಸಿ" ಸಕ್ಕದವೇ ಎಲ್ಲಕ್ಕೂ ಮೇಲು, ಬೇರು ಎಂಬ ತಪ್ಪು ನಂಬಿಕೆಯಿಂದ, " ಇದು ನಿಜ ಅಂತ ನನಗೆ ಕೂಡ ಅನಿಸುತ್ತದೆ, ಸರಿಯಾಗಿ ಬರೆದಿದ್ದೀರ :)
ಪ್ರತ್ಯುತ್ತರಅಳಿಸಿ